ಸಮರ್ಥ ಶ್ರೀ ರಾಮಚಂದ್ರಜಿ ಮಹಾರಾಜ, ಫತೆಹ್ ಗಡ , ಇವರ ಸ್ಮರಣಾರ್ಥ ಶ್ರದ್ಧಾಂಜಲಿ
ಆಧ್ಯಾತ್ಮ ಲೋಕವನು ಬೆಳಗಿಸಿದ ಬಾನು !
ಪರಮಾತ್ಮನರಿವನ್ನು ಪಡೆದುಕೊಂಡವನು
ಜಿಜ್ಞಾಸುಗಳಿಗೆ ನೀ ಮಾರ್ಗದರ್ಶನ ಗೈದೆ
ಪಾರಮಾರ್ಥಕೆ ದೇಹ ಪ್ರಾಣ ನೀನು.

ನಿನ್ನ ಜೀವಿತದ ಪ್ರತಿಯೊಂದು ರೀತಿಯಲಿ
ಪರಮಾರ್ಥ ವೈಭವ ಕಾಣುತಿತ್ತು;
ಪ್ರತಿ ಹಾವಭಾವದಲಿ ವ್ಯಕ್ತವಾಗುತಲಿತ್ತು
ಲೋಕವನು ಬೆಳಗಿಸುವ ದಿವ್ಯ ತೇಜಸ್ಸು.
 
ಪರಮಾತ್ಮನಲಿ ನೀನು ಐಕ್ಯನಾದರು, ಇನ್ನೂ
ಗದ್ದಿಗೆಯ ಮೇಲಿಹುದು ಎಂಥ ಬೆಳಕು !
ಪ್ರತಿಯೊಂದು ಕಣದಲ್ಲು ಎದ್ದು ಕಾಣುತಲಿಹುದು
ಪರಮಾರ್ಥ ಜೀವನದ ಸೊಂಪು-ಥಳಕು !
 
ಸುತ್ತಲೂ ಕವಿದಿದ್ದ ಅಂಧಕಾರವ ನೋಡಿ
ಆಧ್ಯಾತ್ಮ ಕ್ಷೇತ್ರದಲಿ ಕ್ರಾಂತಿಗೊಳಿಸಿ;
ಸಹಜಮಾರ್ಗವ ರಚಿಸಿ , ಹೊಸ ತಳಹದಿಯಲೊಂದು
ಪರಮಾರ್ಥ ಸೌಧವನು ನಿರ್ಮಿಸಿರುವಿ.
 
ನಿನ್ನೊಂದು ಭ್ರೂ ಚಲನದೊಳಗೇನು ಭವ್ಯತೆಯೊ !
ಹೇಳಬಲ್ಲವರಾರು ಗುಟ್ಟನರಿದು ?
ಅದರ ತೇಜದಿ ಬೆಳಗಿ ತೊಳಗಿತ್ತು ಸುತ್ತಲಿನ
ಪರಮಾರ್ಥದಾಕಾಶ , ತಮವು ಹರಿದು.
 
ನೀನು ಊದಿದ ಪ್ರಾಣಬಲದಿ ಪ್ರವಹಿಸುತಿಹುದು
ಇಂದಿಗೂ ಅದರನುಗ್ರಹದ ಧಾರೆ;
ಹಸನಾಗಿ ಎಲ್ಲೆಡೆಗು ಅರಳಿನಿಂತಿದೆ ಈಗ
ಪರಮಾರ್ಥ-ಹೂದೋಟ ಮುದವ ಬೀರೆ.
 
ನಿನ್ನ  ಆ ಒಂದೊಂದು ಮಾತಿನಲ್ಲಿಯು ಪ್ರೇಮ-
ಪೀಯುಷ ತುಂಬಿ ಹರಿಯುತಲಿತ್ತು;
ನಿನ್ನ ಆ ಒಂದೊಂದು ನೋಟವೂ ಪರಮಾರ್ಥ-
ದೊಂದೊಂದು ಕಥೆಯನ್ನು ಸಾರುತಿತ್ತು
 
ಸಹನೆ-ಅವಿಚಲನಿಷ್ಠೆಗಳ ದಿವ್ಯ ಸಂಸಿದ್ದಿ
ದರ್ಶನೀಯವು; ನಿನಗಾಗಿ ಪ್ರಾಣಕೊಡಲು
ಸಿದ್ಧರಿದ್ದರು ತಮ್ಮ ನೂರು ಪ್ರಾಣಗಳಿಂದ
ಆಧ್ಯಾತ್ಮದಅಭಿಲಾಷೆಯುಳ್ಳ ಜನರು.
 
“ತೆರೆಯುವುದು ಸಾಧಕರ ಸುಪ್ತಸೌಭಾಗ್ಯವದು;
ಬೆಳಗುವುದು ತಾನೆ ಪರಮಾರ್ಥ ತೇಜಸ್ಸು.
ಸೆಳೆಯುವುದು ಭಕ್ತರ , ಪತಂಗವಂ ದೀಪದೊಲು”
ಎಂದ ನಿನ್ನಯ ಮಾತು ಸತ್ಯವಾಯ್ತು.
 
ನಿನ್ನ ಕೃಪೆ ನಿನ್ನನುಗ್ರಹದಿಂದ ಇಂದು
ಬೀರುತಿದೆ ಆ ಜ್ಯೋತಿ ದಿವ್ಯಪ್ರಭೆಯ.
ಪರಮಾತ್ಮ ಪ್ರೇಮಿಗಳು ಪಡೆದುಕೊಳ್ಳುತಲಿಹರು
ಪರಮಾರ್ಥದಾಲೋಕ ಮೋದದಿಂದ.
 
ಸತ್ಯ ದೃಷ್ಟಿಯನುಳ್ಳ ‘ಬಿಸ್ಮಿಲ್’*
ನೋಡಿಕೋ ಸಂತೋಷದಿ !
ಪಾರಮಾರ್ಥದ ಪುಷ್ಪವನವದು
ಹೇಗೆ ವಿಕಸಿತವಗಿದೆ.

ಮದನ ಮೋಹನಲಾಲ್ ಶ್ರೀವಾಸ್ತವ ವಕೀಲ್ ಬದಾಯೂನ್
*ಇದು ಕವಿತೆಯ ಅಂಕಿತ

ಆಫತಾಬೆ ಉರ್ದು ಅವತರಣೆ