<p style=”text-align: justify;”><span style=”font-weight: 400;”> ಪರಿಪೂರ್ಣತೆ, ಶಾಶ್ವತ ಆನಂದ, ದುಃಖದಿಂದ ಸಂಪೂರ್ಣ ಬಿಡುಗಡೆ, ಶಾಶ್ವತ ಶಾಂತಿ ಮುಂತಾದವುಗಳು ಮಾನವ ಹೃದಯದ ಉದಾತ್ತ ಅಭೀಷ್ಟೆಗಳಾಗಿವೆ. ಅನೇಕ ತತ್ತ್ವಶಾಸ್ತ್ರಗಳು, ಚಿಂತನ ವಿಧಾನಗಳು, ಜೀವನ ವಿಧಾನಗಳು, ಮತ್ತು ಮತಧರ್ಮಗಳು, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳು ಇಂತಹ ಅಭೀಷ್ಟೆಗಳ ಫಲಿತಗಳಾಗಿವೆ. ಹಾಗಿದ್ದರೂ, ಆ ಆದರ್ಶವನ್ನು ಸಾಧಿಸಲಾಗಲಿಲ್ಲ. ಹಾಗೂ ಅದು ಸಾಧ್ಯವೂ ಅಲ್ಲವೆಂದು ಕಂಡುಬರುವುದು. ಯಾವವುಗಳ ವಿರುದ್ಧ ಮಾನವ ಕುಲವು ಕಷ್ಟಪಟ್ಟು ಹೆಣಗಾಡುತ್ತಿರುವುದೋ ಅವು ಪ್ರತಿಯೊಂದು ಹೋರಾಟದ ನಂತರವೂ ಮತ್ತೂ ಮತ್ತೂ ಬಲಿಷ್ಠವಾಗುತ್ತ ಹೋಗುತ್ತಿರುವಂತೆ ಕಂಡುಬರುತ್ತದೆ. </span></p>

<p style=”text-align: justify;”><span style=”font-weight: 400;”>ಈಯೆಲ್ಲವುಗಳ ಮೂಲ ಕಾರಣವನ್ನು ಕುರಿತು ಆಳವಾಗಿ ಒಬ್ಬನು ಯೋಚಿಸಿದರೆ, ಈ ವಿಷಯಗಳನ್ನು ರೂಪಿಸವುದರಲ್ಲಿ ಚಿಂತನ ಶಕ್ತಿಯೇ ಪ್ರಧಾನ ಪಾತ್ರ ವಹಿಸುತ್ತದೆ ಎಂಬ ಅನಿವಾರ್ಯ ತೀರ್ಮಾನಕ್ಕೆ ಬರುವನು. ಆದ್ದರಿಂದ, ಚಿಂತನದ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಪರಿಶೀಲಿಸುವುದು, ವಿಷಯ-ವಸ್ತುಗಳನ್ನು ಅನಪೇಕ್ಷಿತ ರೀತಿಯಲ್ಲಿ ಅದು ರೂಪಿಸದಂತೆ ಮಾಡಲು ಆವಶ್ಯಕವಾಗಿದೆ. ಕೇಂದ್ರೀಕೃತವಾದ ಚಿತ್-ಶಕ್ತಿಯು, ಅವಿವೇಕದಿಂದ ಬಳಸಲ್ಪಟ್ಟರೆ, ಭೌತಿಕತೆ ಹಾಗೂ ಸ್ಥೂಲತೆಗಳನ್ನು ಉಂಟುಮಾಡುವುದು. ಆದುದರಿಂದ, ಈ ವಿಷಯದಲ್ಲಿ, ಅಂತಹ ಪರಿಣಾಮವಾಗದಂತೆ ನಾವು ವಿಶೇಷ ಕಾಳಜಿ ವಹಿಸಬೇಕು. ತಥಾಕಥಿತ ‘ಸಾಧಕರು’ ಈ ಹೇಳಿಕೆಗೆ ಪ್ರತಿಭಟಿಸಬಹುದು. ಏಕೆಂದರೆ, ಏಕಾಗ್ರತೆಯ ಅಭ್ಯಾಸ ಮಾಡಲು ಅವರಿಗೆ ನಿರಂತರವಾಗಿ ಹೇಳಲಾಗಿದೆ; ಹಾಗೂ ಏಕಾಗ್ರತೆಯ  ಆಕರ್ಷಣಯಿಂದ ಅವರು  ಸಂಮೋಹಿತರಾಗಿರುವರು. ಆದರೆ ಆಕರ್ಷಕ ಇಚ್ಛೆಗಳು, ಮತ್ತು ಇಚ್ಛಾಪ್ರಚೋದಿತವಾದ ಕಲ್ಪನೆಗಳಿಂದ ಕೂಡಿದ ಆಲೋಚನೆಗಳು  ಬಂಧನಗಳನ್ನು ಹೆಚ್ಚಿಸುವವು, ಹಾಗೂ ಮುಕ್ತ ಚಿಂತನೆಗೆ ಮತ್ತು ಮುಕ್ತಿಯ ಮಾರ್ಗದಲ್ಲಿ ಅಡಚಣೆ ಉಂಟಾಗುವುದು.</span></p>

<p style=”text-align: justify;”><span style=”font-weight: 400;”>ಮೂಲ ಕಾರಣವನ್ನು ಕಂಡು ಹಿಡಿದ ಮೇಲೆ ಧೈಯವಾದ ಆದರ್ಶವನ್ನು  ಸಾಧಿಸಲು, ಅದನ್ನು ಯೋಗ್ಯ ರೀತಿಯಲ್ಲಿ ಬಳಸಬೇಕಾದುದು ಆವಶ್ಯಕವಾಗಿದೆ. ಆದರ್ಶವು ಉಚ್ಚವಾಗಿದ್ದಷ್ಟೂ ನಮ್ಮ ನಿಲುಕು ಕೂಡ ಉಚ್ಚ ಮಟ್ಟದ್ದಾಗುವುದು. ನಾವು ನಮ್ಮ ದೃಷ್ಟಿಯಲ್ಲಿ ಅನೇಕ ಆದರ್ಶವನ್ನು ಇಟ್ಟುಕೊಂಡರೆ ನಮ್ಮ ಇಚ್ಛೆಗಳನ್ನು ಮತ್ತು ಬೇಕು-ಬೇಡಗಳನ್ನು ಹೆಚ್ಚಿಸಿಕೊಂಡಂತಾಗುವುದು. ಇದರಿಂದಾಗಿ ‘ನಾವು ಏಕಕಾಲಕ್ಕೆ  ಪರಸ್ಪರ ವಿರೋಧಿ ವಿಷಯಗಳನ್ನು ಬಲಗೊಳಿಸಿದಂತಾಗುವುದು. ಹೀಗೆ, ನಮ್ಮ ಹೆಣಗಾಟವು ಸುದೀರ್ಘ ಹಾಗೂ ತೀವ್ರರೂಪ ತಾಳಿ ನಮ್ಮ ಗುರಿಯಿಂದ ನಮ್ಮನ್ನು ಎಂದೆಂದಿಗೂ ಬಹುದೂರ ಇರಿಸುವುದು. ಆದಕಾರಣ ಅತ್ಯುನ್ನತ ಪರತತ್ತ್ವದ ಸಾಕ್ಷಾತ್ಕಾರ ಹಾಗೂ ಅದರಲ್ಲಿ ಸಂಪೂರ್ಣ ಐಕ್ಯವಾಗುವುದನ್ನೇ ನಮ್ಮ ಗುರಿಯಾಗಿ ನಿಶ್ಚಿತಗೊಳಿಸೋಣ. ಅದೊಂದೇ ನಮ್ಮ ಗುರಿಯಾಗಿರಲಿ. ಒಬ್ಬ ಅದನ್ನು ಅಂದರೆ ಪರಮ ತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡನೆಂದರೆ ಎಲ್ಲವನ್ನೂ ಸಾಧಿಸಿಕೊಂಡಂತಾಯಿತು, ಮತ್ತು ಅತ್ಯುಚ್ಚ ಅಭೀಷ್ಟೆಯು ಈಡೇರಿದಂತಾಯಿತು. ಇದು ಒಬ್ಬ ವ್ಯಕ್ತಿಯ ನೆಲೆಯಲ್ಲಿ ಘಟಿಸುವುದೋ ಅಥವಾ ಇಡೀ ಮಾನವ ಕುಲದ (ಸಮಷ್ಟಿಯ) ನೆಲೆಯಲ್ಲಿ ಘಟಿಸುವುದೋ ಎಂಬುದು ಕೇವಲ ಊಹಾತ್ಮಕ ಪ್ರಶ್ನೆಯಾಗುತ್ತದೆ. ವಸ್ತುತಃ ನೀವೇ ವೈಯಕ್ತಿಕವಾಗಿ ಸಾಧನೆಯನ್ನು ಕೈಗೊಂಡು ಪ್ರಯತ್ನಿಸಬೇಕಾಗುವುದು. </span></p>

<p style=”text-align: justify;”><span style=”font-weight: 400;”>ಚಿತ್ತದ ಅಸ್ವಾಭಾವಿಕ ಏಕಾಗ್ರತೆಯು ಸ್ಥೂಲತೆ ಹಾಗೂ ಬಂಧನಗಳನ್ನು ಸೃಷ್ಟಿಸುವುದೆಂದು ಈ ಮೊದಲೇ ಹೇಳಲಾಗಿದೆ. ಆದ್ದರಿಂದ, ನಾವು ಅಭ್ಯಾಸವನ್ನು ಕೈಗೊಂಡರೆ ನಮ್ಮ ಮುಂದಿನ ಯಾತ್ರೆಯ ಯಾವುದೇ ಹಂತದಲ್ಲಿ ನಮ್ಮ ವಿಚಾರವು ಸ್ಥೂಲವಾಗದಂತೆ ನಾವು ಅತ್ಯಂತ ಜಾಗರೂಕರಾಗಿರಬೇಕು, ಹಾಗೂ ಪ್ರತಿಕ್ಷಣವೂ ಎಚ್ಚರಿಕೆ ವಹಿಸಬೇಕು. ಪ್ರತಿಯೊಂದು ಹಂತದಲ್ಲಿ ಚಿಂತನ ಶಕ್ತಿಯು ಬಲವಾದ ಗ್ರಂಥಿಗಳನ್ನು ಉಂಟುಮಾಡಿತು. ಆ ಗ್ರಂಥಿಗಳನ್ನು ಸಡಿಲಗೊಳಿಸಿದರೆ,  ಪ್ರಚಂಡ ಶಕ್ತಿಯು ಬಿಡುಗಡೆಯಾಗುವುದು. ಅಲ್ಲದೆ ಒಬ್ಬನು ಅದರ ಬಗ್ಗೆ ಏಕಾಗ್ರತೆಗೆ ಪ್ರಯತ್ನಿಸಿದರೆ, ಆ ಗ್ರಂಥಿಯು ಸಡಿಲುಗೊಳ್ಳುವುದರ ಬದಲಿಗೆ, ತನ್ನ ಸ್ವರೂಪವನ್ನು ಕಾಯ್ದುಕೊಳ್ಳುವುದಲ್ಲದೆ, ಮತ್ತೂ ಹೆಚ್ಚು ಶಕ್ತಿಯುತವೂ, ಗಟ್ಟಿಯಾಗಿಯೂ ಆಗುವುದು, ಮತ್ತು ಅವನು ಅದನ್ನು ದಾಟಿ ಹೋಗುವ ಆಶೆಯೇ ಉಳಿಯದಂತೆ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. </span></p>

<p style=”text-align: justify;”><span style=”font-weight: 400;”>ಬಹುತೇಕವಾಗಿ ಏಕಾಗ್ರತೆಯ ಅಭ್ಯಾಸದ ಪ್ರಯೋಜನದ – ಬಗ್ಗೆ ಒಬ್ಬ ಸಾಮಾನ್ಯ ಓದುಗನ ನಂಬಿಕೆ ಇಷ್ಟು ಹೊತ್ತಿಗಾಗಲೇ ಅಲುಗಾಡುತ್ತಿರಬಹುದು. ಇದೊಂದು ಒಳ್ಳೆಯ ಸಂಕೇತ. ಆ ನಂಬುಗೆಯು ಸಹಜ ಅವಸ್ಥೆಯಲ್ಲಿ ಸಂಪೂರ್ಣವಾಗಿ ಕರಗಿ ಹೋಗಲಿ, ಈ ರೀತಿಯಾಗಿಯೇ ಎಲ್ಲ ತೊಡಕುಗಳನ್ನು ಹಾಗೂ ಗ್ರಂಥಿಗಳನ್ನು ನಿವಾರಿಸಬಹುದು; ಮತ್ತು ಆಗ ಸರಳತೆ ಮತ್ತು ಸಹಜತೆಗಳು ಉದಯಿಸುವವು. ಆದರೂ ಅಭ್ಯಾಸ ಬಲದಿಂದಾಗಿ, ಮಹಾತ್ಮರು ಏಕಾಗ್ರತೆಯ ಅಭ್ಯಾಸದ ಬಗ್ಗೆ ಉಪದೇಶಿಸುವುದರ ವಿವೇಕವನ್ನು ಕುರಿತು ಸಂದೇಹ ಉದಯಿಸಬಹುದು. </span></p>

<p style=”text-align: justify;”><span style=”font-weight: 400;”>ಇಲ್ಲಿ ಮತ್ತೆ, ಒಬ್ಬ ಉಪದೇಶಕನ ಮೇಲೆ ವಿಶ್ವಾಸವನ್ನಿರಿಸುವ ಮೊದಲು ಅವನನ್ನು ಪೂರ್ತಿಯಾಗಿ ಪರೀಕ್ಷಿಸಬೇಕು. ಆ ಉಪದೇಶವು ಅವನ ಪ್ರಾಯೋಗಿಕ ಅನುಭವದಿಂದ ಹೊರಹೊಮ್ಮಿ ಬಂದುದಾಗಿರಬೇಕು. ಅಲ್ಲವಾದರೆ ಅದು ಅರ್ಥರಹಿತ ಮತ್ತು ದಾರಿ ತಪ್ಪಿಸುವಂತಹದಾಗುವುದು. ಪಂಡಿತರ ಪ್ರಭುತ್ವಪೂರ್ಣ ಭಾಷಣಗಳು ವಿದ್ಯಾಪರಿಣತರನ್ನು ಕಚಗುಳಿಯಿಟ್ಟು ರಂಜಿಸಬಹುದು. ಆದರೆ ಅವು ಕೇವಲ ಆಕರ್ಷಕ ಹಾಗೂ ಸುಂದರ ಶಬ್ದಪುಂಜಗಳಿಗಿಂತ ಹೆಚ್ಚಿನದೇನೂ ಆಗಿರದಿದ್ದರೆ, ಒಬ್ಬ ಅಧ್ಯಾತ್ಮ ಜಿಜ್ಞಾಸುವಿಗೆ ಯಾವ ಪ್ರಯೋಜನಕ್ಕೂ ಬಾರವು, ಅಲ್ಲದೆ, ಅನೇಕ ಸಲ ಅವು ಹಾನಿಕರವೂ ಆಗಬಲ್ಲವು. ಋಷಿಗಳ ಹೇಳಿಕೆಗಳೆಂದು ಶಾಸ್ತ್ರಗಳಲ್ಲಿ ಬಿಂಬಿಸಲಾದ ಏಕಾಗ್ರತೆಯ ಸ್ಥೂಲ ಚಿತ್ರಗಳು, ಆಧ್ಯಾತ್ಮಿಕ ಯಾತ್ರೆಯ ಸಿದ್ಧತೆಗಾಗಿ ಇರುವ ನಿಯಮಗಳನ್ನು ಪೂರ್ತಿಗೊಳಿಸಿಕೊಳ್ಳುವುದಕ್ಕೋಸ್ಕರ ಇವೆ. </span></p>

<p style=”text-align: justify;”><span style=”font-weight: 400;”>ಏಕಾಗ್ರತೆಯ ಸ್ಥಿತಿಯು ಧ್ಯಾನಾಭ್ಯಾಸದ ಫಲರೂಪವಾಗಿರುವಾಗ, ಅದು ಮಾನಸಿಕ ಪ್ರಕ್ಷೇಪ ಅಥವಾ ಕಲ್ಪಿತಗಳಿಂದ ರೂಪಿತವಾದುದಲ್ಲ. ಈ ಏಕಾಗ್ರತೆಯು, ‘ಏಕಾಗ್ರತೆ ಎಂಬ ಶಬ್ದದ ಸಾಮಾನ್ಯ ಅರ್ಥದಲ್ಲಿ ಸೂಚಿತವಾದ ಪ್ರಯತ್ನ ಅಥವಾ ಹೆಣಗಾಟದಿಂದ ಸಂಪೂರ್ಣ ಮುಕ್ತವಾಗಿದ್ದು, ಸರಳ ಹಾಗೂ ಸ್ವಾಭಾವಿಕವಾದುದಾಗಿದೆ. ಬಲಪ್ರಯೋಗದಿಂದ ಉಂಟಾದ ಏಕಾಗ್ರತೆಯ ಸ್ಥಿತಿಗೆ ವಿರುದ್ಧವಾಗಿ, ಅದನ್ನು ವ್ಯಾಪಿಸುವಿಕೆಗೆ ಸಮಾನ ಲಕ್ಷಣವುಳ್ಳ ಸ್ಥಿತಿಯೆಂದು ಭಾವಿಸುವುದು ಹೆಚ್ಚು ಯೋಗ್ಯವಾಗಬಲ್ಲುದು. </span></p>

<p style=”text-align: justify;”><span style=”font-weight: 400;”>ಸಹಜಮಾರ್ಗದಲ್ಲಿ ಏಕಾಗ್ರತೆಯನ್ನು ವಿಧಿಸಿಯೇ ಇಲ್ಲ. ಅಭ್ಯಾಸಿಗೆ ಗ್ರಹಿಸಲು ಸಾಧ್ಯವಾದ, ಭಗವಂತನ ಅತ್ಯಂತ ಸೂಕ್ಷ ಗುಣದ ಮೇಲೆ ಸರಳ ರೀತಿಯಲ್ಲಿ ಧ್ಯಾನ ಮಾಡಲು ನುರಿತ ಮಾರ್ಗದರ್ಶಿ ನಿರ್ದೇಶಿಸುತ್ತಾನೆ. ಶಾಂತ ಹಾಗೂ ಸಮಾಧಾನದ ಏಕಾಗ್ರತೆಯ ಸ್ವಾಭಾವಿಕ ಸ್ಥಿತಿ ಅದರ ಫಲಿತಾಂಶವಾಗಿದೆ. ಅಭ್ಯಾಸಿಯು ಸಾಕಷ್ಟು ಪ್ರಗತಿ ಹೊಂದಿದಾಗ ‘ಏಕಾಗ್ರತೆ’ಯ ಸರಿಯಾದ ಅರ್ಥವನ್ನು ಗ್ರಹಿಸುತ್ತಾನೆ. ಒಂದು ವಿಶಿಷ್ಟ ಸ್ಥಿತಿಯನ್ನು ಏಕಾಗ್ರತೆ ಎಂದು ಕರೆಯುವ ಬದಲಾಗಿ, ಅವನು ಅದನ್ನು ‘ಏಕಾಗ್ರವಾಗುವಿಕೆ’ಯ ಅವಸ್ಥೆ ಎಂದು ಕರೆಯಬಹುದು. ಸ್ಥೂಲತೆ ಮತ್ತು ಜಡತ್ವಗಳು ಹೊರಟು ಹೋದಾಗ, ಲಘುತ್ವ ಹಾಗೂ ವ್ಯಾಪಕತೆಯ ಸ್ಥಿತಿಗಳು ಕಾಣಿಸಿಕೊಳ್ಳುವವು. ಅಂತಹ ಸೂಕ್ಷ್ಮ ಸ್ಥಿತಿಯನ್ನು ಸಾಧಿಸಿದ ನಂತರ ಅವನು ಹೆಚ್ಚು ಹೆಚ್ಚು ಸೂಕ್ಷ್ಮತರವಾದ ಹಾಗೂ ವಿರಳೀಕೃತವಾದ ಸ್ಥಿತಿಗಳ ಕಡೆಗೆ ಮುಂದುವರಿಯುವನು. ಇವೆಲ್ಲವನ್ನೂ ಪ್ರಾಯೋಗಿಕವಾಗಿ ಪ್ರಮಾಣಿಸಿ ನೋಡಬಹುದು. ಪ್ರಾಣಾಹುತಿಯ ಸಹಾಯದಿಂದ ಅತ್ಯಂತ ಸೂಕ್ಷ್ಮ ಸ್ಥಿತಿಗಳನ್ನು ಕೂಡ ಅತ್ಯಲ್ಪ ಸಮಯದಲ್ಲಿಯೇ ಪಡೆಯಬಹುದು. </span></p>

<p style=”text-align: justify;”><span style=”font-weight: 400;”>ಏಕಾಗ್ರತೆಯ ಅಭ್ಯಾಸದ ಬದಲಿಗೆ, ಭಕ್ತಿಯನ್ನು ಬೆಳೆಸಿಕೊಳ್ಳಲು ಅಭ್ಯಾಸಿಗೆ ಸಲಹೆ ಮಾಡಬಹುದು. ಈ ಸ್ಥಿತಿಯನ್ನು ಅನೇಕ ಸಲ ಒತ್ತಾಯದ ಏಕಾಗ್ರತೆಗೆ ಸಮಾನ ಸ್ವರೂಪದ್ದೆಂದು ತಪ್ಪಾಗಿ ತಿಳಿಯಲಾಗಿದೆ. ಆದರೆ, ವಾಸ್ತವವಾಗಿ, ಭಕ್ತಿಯಲ್ಲಿ ಅನುಭವಕ್ಕೆ ಬರುವ ಏಕತೆಯ ಸ್ಥಿತಿಯು (ಭಾವವು) ಒಂದು ಸ್ವಾಭಾವಿಕ ಸ್ಥಿತಿಯಾಗಿದೆ,  ಹಾಗೂ ಅದು ದೈವಿಕತೆಯೊಂದಿಗಿನ ನಿಕಟ ಸಂಬಂಧದಿಂದ ಉಂಟಾಗಿರುತ್ತದೆ. ಭಕ್ತಿಯ ಸರಿಯಾದ ಅಭ್ಯಾಸದಲ್ಲಿ ಮಾನಸಿಕ ಪಕ್ಷೇಪಗಳಿಗೆ ಅವಕಾಶವಿಲ್ಲ. ಕೆಲವು ಸಲ ಭಾವಾವೇಗಗಳು ಉಕ್ಕಿ ಬರುವವು ಹಾಗೂ ಅದ್ಭುತ ಸೌಂದರ್ಯದ ಸೀಮೆಯಲ್ಲಿ ಜಿಗಿದು ಬಿಡುವ ಒಲವು ಬೆಳೆಯಬಹುದು; ಆದರೂ ಸಹಜಮಾರ್ಗದಲ್ಲಿಯಂತೆ ಒಬ್ಬ ನುರಿತ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿರುವಾಗ ಅಭ್ಯಾಸಿಯ ಇಂತಹ ಮನಃಕೋಭೆಗಳು ಸದಾ ಜಾಗ್ರತರಾಗಿರುವ ಗುರುಗಳಿಂದಾಗಿ ಕೂಡಲೇ ನಿಯಂತ್ರಣದಲ್ಲಿ ಬರುತ್ತವೆ, ಮತ್ತು ಪ್ರಾಣಾಹುತಿಯ ಮೂಲಕ ಸಂತುಲಿತ ಸ್ಥಿತಿಯನ್ನು ಮರಳಿ ತರಲಾಗುವುದು. ಆದರೆ ಭಕ್ತಿಯನ್ನು ಒಂದು ಯಾಂತ್ರಿಕ ರೀತಿಯಲ್ಲಿ, ಏಕಾಗ್ರತೆಯನ್ನು ಪಡೆಯುವ ಇಚ್ಛೆಯಿಂದಲೇ ಅಭ್ಯಾಸ ಮಾಡಿದ್ದಾದರೆ, ಅದು ಆಂತರಿಕ ಜಡತೆ ಮತ್ತು ಸ್ಥೂಲತೆಗಳನ್ನುಂಟುಮಾಡುವುದು, ಹಾಗೂ ಸ್ಥೂಲ ವಸ್ತುಗಳ ಮೇಲಿನ ಇಂತಹ ಏಕಾಗ್ರತೆಯು ಸ್ಥಿತಿಯನ್ನು ಮತ್ತೂ ಹೆಚ್ಚು ಹೆಚ್ಚು ಕೆಡಿಸುವುದು. </span></p>

<p style=”text-align: justify;”><span style=”font-weight: 400;”>ಕೆಲವರು ಏಕಾಗ್ರತೆಯನ್ನು ಸ್ಥೂಲ ಹಾಗೂ ಜಡ ಪದಾರ್ಥಗಳ ಮೇಲೆ ಯಾಂತ್ರಿಕವಾಗಿ ಮಾಡುತ್ತಾರೆ. ಇದು ಮಾನಸಿಕ ಅಧಃಪತನದ ಮತ್ತು ಆಧ್ಯಾತ್ಮಿಕ ಅವನತಿಯ ಅತ್ಯಂತ ಹೀನ ರೂಪವಾಗಿದೆ. ಇದು ಆಧ್ಯಾತ್ಮಿಕತೆಯೇ ಅಲ್ಲ. ಇಂತಹ ಅಭ್ಯಾಸಗಳಲ್ಲಿ ಭೌತಿಕ ಅಥವಾ ಸಂಮೋಹನ ಶಕ್ತಿಗಳನ್ನು ಪಡೆಯುವುದೇ ಮುಖ್ಯ ಉದ್ದೇಶವಾಗಿರುವುದು. ಭಗವಂತನು ‘ಸೂಕ್ಷ್ಮತಮ ಸತ್ತೆ’, ‘ಆದಿಮೂಲ’, ‘ಆತ್ಯಂತಿಕ ನಿರಪೇಕ್ಷ ತತ್ತ್ವ’ (Ultimate Absolute) ಮುಂತಾದ ವಿಚಾರ ಇಂತಹ ವ್ಯಕ್ತಿಗಳ ಮನಸ್ಸಿನಲ್ಲಿ ಎಂದಿಗೂ ಸುಳಿಯುವುದಿಲ್ಲ. ಅವರು ತಮ್ಮ ಅಂತರಂಗದ ಸ್ಥಿತಿಯನ್ನು ಸುಧಾರಣೆಯ ಯಾವ ಸಾಧ್ಯತೆಯೂ ಇಲ್ಲವಾಗುವಷ್ಟು ಕೆಡಿಸಿಕೊಳ್ಳುವರು. ಅವರ ಬುದ್ಧಿಮಾಂದ್ಯ ಮೊಂಡತನ, ಪ್ರತಿಯೊಂದು ಸೂಕ್ಷ್ಮ, ಆಧ್ಯಾತ್ಮಿಕ ಅಥವಾ ದೈವೀ ಶಕ್ತಿಯನ್ನು ಕುರಿತ ನಿರಾಕರಣೆ ಹಾಗೂ ಅವರ ಅಸಹಕಾರಿ ಮನೋಭಾವನೆಗಳಿಂದ ಅವರನ್ನು ಗುರುತಿಸಬಹುದು. ದೈವೀ ಸಂಪರ್ಕದ ಪ್ರಭಾವದ ಸ್ಪರ್ಶಕ್ಕೂ ಒಳಗಾಗದಷ್ಟು ಅಂಧಕಾರವನ್ನು  ಅವರು ತಮ್ಮೊಳಗೆ ಹುಟ್ಟಿಸಿಕೊಂಡಿರುತ್ತಾರೆ. ಅವರ ಸ್ಥಿತಿಯು ಅಮಲೇರಿಸುವ ಔಷಧಗಳ ಗುಲಾಮರ ಸ್ಥಿತಿಗೆ ಸದೃಶವಾಗಿರುವುದು. </span></p>

<p style=”text-align: justify;”><span style=”font-weight: 400;”>ಈಗ, ಒಬ್ಬ ಬುದ್ಧಿವಂತ ವ್ಯಕ್ತಿಯ ಕರ್ತವ್ಯವೇನೆಂದರೆ, ಮಾನವ ಹೃದಯದ ಅಭೀಷ್ಟೆಗಳ ನಿಜವಾದ ಮಹತ್ತ್ವವನ್ನು ಅರ್ಥ ಮಾಡಿಕೊಳ್ಳುವುದು, ಆಳವಾಗಿ ವಿಚಾರಮಾಡಿ, ಅಪೇಕ್ಷಿತ ಧೈಯಕ್ಕೆ ಕರೆದೊಯ್ಯುವ ಸರಿಯಾದ ಮಾರ್ಗವನ್ನು ಕಂಡುಕೊಳ್ಳುವುದು, ಹಾಗೂ, ಆ ಆದರ್ಶವನ್ನು ಸಿದ್ಧಿಸಿ(ಸಾಕ್ಷಾತ್ಕರಿಸಿ)ಕೊಂಡ ಒಬ್ಬನ ಸಹಾಯದಿಂದ ಅಥವಾ ಸಾಧ್ಯವಾಗಬಹುದಾದರೆ ನೇರವಾಗಿ ಸಾಕ್ಷಾತ್ಕರಿಸಿಕೊಳ್ಳುವುದು. ಇದೊಂದೇ ಜೀವನದ ಏಕಮಾತ್ರ ಉದ್ದೇಶವಾಗಿದೆ, ಹಾಗೂ ಈ ಆಹ್ವಾನವನ್ನು ಸ್ವೀಕರಿಸಲು ಒಬ್ಬನು ಸಾಕಷ್ಟು ಸಾಹಸಿಯಾಗಬೇಕು. ಇಲ್ಲವಾದರೆ, ಪ್ರಕೃತಿಯ ಈ ಮಹಾ ಕಾರ್ಯಾಗಾರದಲ್ಲಿ, ಅವನ ಈ ಮಾನವ ಜನ್ಮವು ಇನ್ನೊಂದು ವ್ಯರ್ಥ ಸಂಗತಿಯಾಗಬಹುದು.</span></p>

<p style=”text-align: right;”>  [ಸಹಜಮಾರ್ಗ ಪತ್ರಿಕೆ, ನಂ. 3, 1962] </p>